ಒಂದು ಪಾರಿವಾಳದ ಗುಂಪು ಮಸೀದಿ ಮೇಲೆ ಗೂಡು ಕಟ್ಟಿಕೊಂಡು ವಾಸವಾಗಿದ್ದವು. ರಂಜಾನ್ ಬಂತು, ಮಸೀದಿಗೆ ಸುಣ್ಣಬಣ್ಣ ಬಳಿಯಲು ಎಲ್ಲಾ ಸ್ವಚ್ಛಗೊಳಿಸತೊಡಗಿದರು. ಆಗ ಆ ಪಾರಿವಾಳಗಳು ಅಲ್ಲಿಂದ ಹಿಂದೂ ದೇವಾಲಯಕ್ಕೆ ಹೋಗಿ ವಾಸವಾದವು. ಕೆಲದಿನಗಳಲ್ಲಿ ದಸರಾ ಹಬ್ಬ ಬಂತು. ಅಲ್ಲಿಂದ ಪಾರಿವಾಳಗಳು ಹಾರಿ ಚರ್ಚ್ ಮೇಲೆ ನೆಲೆಸಿದವು. ಕ್ರಿಸ್'ಮಸ್ ವೇಳೆಗೆ ಮತ್ತೆ ಮಸೀದಿಗೆ ನೆಲೆ ಬದಲಾಯಿಸಿದವು.
ಒಂದು ದಿನ ಮಸೀದಿ ಮುಂದೆ ಕೋಮುಗಲಭೆ ನಡೆಯಿತು. ಆಗ ಅದನ್ನು ನೋಡಿದ ಮರಿ ಪಾರಿವಾಳ ತಾಯಿ ಪರಿವಾಳವನ್ನು ಕೇಳಿತು....
'ಯಾರು ಅವರು ಬಡಿದುಕೊಳ್ಳುತ್ತಿರುವುದು'.
ತಾಯಿ ಪಾರಿವಾಳ ಹೇಳಿತು...
'ಅವರು ಮನುಷ್ಯರು' ಮಗು.
ಯಾಕೆ ಅವರು ಜಗಳವಾಡುತ್ತಿದ್ದಾರೆ...
'ಮಸೀದಿಗೆ ಹೋಗುವವರು ಮುಸ್ಲಿಮರು'
'ಗುಡಿಗೆ ಹೋಗುವವರು ಹಿಂದುಗಳು'
'ಚರ್ಚ್'ಗೆ ಹೋಗುವವರು ಕ್ರೈಸ್ತರು'
ಇದು ಹಿಂದು ಮುಸ್ಲಿಮರ ಘರ್ಷಣೆ.
ಮರಿ ಪಾರಿವಾಳಕ್ಕೆ ಆಚ್ಚರ್ಯವಾಯಿತು.
'ನಾವು ಕೂಡ ಮಸೀದಿಗೆ, ಗುಡಿಗೆ, ಚರ್ಚ್'ಗೆ ತಿರುಗಿದ್ದೆವು ಅಲ್ಲವೇ...!
ನಾವು ಎಲ್ಲಿಗೆ ಹೋದರೂ ಪಾರಿವಾಳಗಳೇ.
ಮತ್ತೆ ಅವರು ಮನುಷ್ಯರು ಎಲ್ಲಿಗೆ ಹೋದರೂ ಮನುಷ್ಯರೇ ಅಲ್ಲವೇ...!
ತಾಯಿ ಪಾರಿವಾಳ ನಕ್ಕಿತು....
"ನಾವು ಅವರಿಗಿಂತ ಎತ್ತರದಲ್ಲಿದ್ದೆವೆ. ವಿಶಾಲವಾದ ಪ್ರಪಂಚ ನಮ್ಮದು. ಸ್ವೇಚ್ಛಾ ಜಗತ್ತು ನಮ್ಮದು. ಎಲ್ಲಾ ಜೀವಿಗಳಲ್ಲಿ ಮೇಧಾವಿಯಾದ ಮಾನವ ಕುಲ, ಮತ, ಜಾತಿ, ಲಿಂಗ, ವರ್ಗ ಗೋಡೆಗಳನ್ನು ನಿರ್ಮಿಸಿಕೊಂಡಿದ್ದಾನೆ. ಎಲ್ಲವನ್ನೂ ಬಿಟ್ಟರೆ ಮಾತ್ರ ಅವರು ನಮ್ಮ 'ಎತ್ತರ'ಕ್ಕೆ ಬರುತ್ತಾರೆ.
ಈ ಘರ್ಷಣೆಗಳು ಅಂತ್ಯವಾಗುತ್ತವೆ". ಎನ್ನುತ್ತಾ ಪೂರ್ವದಿಕ್ಕಿನಲ್ಲಿ ವಿಹಂಗಮವಾಗಿ ಹಾರುತ್ತಿರುವ ಮತ್ತೊಂದು ಪಾರಿವಾಳದ ಗುಂಪನ್ನು ನೋಡುತ್ತಾ ಹೇಳಿತು.
( ಕಥೆ ಬರೆದವರು ಗೊತ್ತಿಲ್ಲ. But i Salute him)
No comments:
Post a Comment